ಶನಿವಾರ, ಅಕ್ಟೋಬರ್ 3, 2015

ಸರ್ವಜ್ಞನ ವಚನಗಳು 202-204

202. ಅಗ್ಗ ಬಡವಗೆ ಲೇಸು | ಬುಗ್ಗೆಯಗಸಗೆ ಲೇಸು |
ತಗ್ಗಿದ ಗದ್ದೆ ಉಳಲೇಸು, ಜೇಡಂಗೆ |
ಮಗ್ಗ ಲೇಸೆಂದ ಸರ್ವಜ್ಞ ||
ಅರ್ಥ: ಅಗ್ಗವಿದ್ದಂಥ (ವಸ್ತುಗಳು) ಬಡವನಿಗೆ, (ನೀರಿನ) ಬುಗ್ಗೆಯು ಅಗಸನಿಗೆ, ತಗ್ಗಿನಲ್ಲಿದ್ದ ಗದ್ದೆಯು ಬಿತ್ತನೆಯ ಕೆಲಸಕ್ಕೆ ಯೋಗ್ಯವಿರುವಂತೆ ನೇಕಾರನಿಗೆ ಮಗ್ಗವೇ ಲೇಸು.
 203. ಬೇಡಗಡವಿಯ ಚಿಂತೆ | ಆಡಿಂಗೆ ಮಳೆಚಿಂತೆ |
ನೋಡುವ ಚಿಂತೆ ಕಂಗಳಿಗೆ, ಹೆಳವಗೆ |
ದ್ದಾಡುವ ಚಿಂತೆ ಸರ್ವಜ್ಞ ||
ಅರ್ಥ: ಬೇಡನಿಗೆ ಅಡವಿಯ ಚಿಂತೆ, ಆಡಿಗೆ ಮಳೆಯ ಬಯಕೆ, ಕಣ್ಣುಗಳಿಗೆ (ಏನಾದರೂ) ನೋಡುವ ಚಿಂತೆಯಿರುವಂತೆ ಹೆಳವನಿಗೆ ಎದ್ದು ತಿರುಗಾಡುವ ಚಿಂತೆ ಬಿಡದು.
204. ಬೇಡನೊಳ್ಳಿದನೆಂದು | ಆಡದಿರು ಸಭೆಯೊಳಗೆ |
ಬೇಡ ಬೇಡಿದರೆ ಕೊಡದಿರೆ, ಬಯ್ಗಿಂಗ |
ಗೋಡೆಯನ್ನು ಒಡೆವ ಸರ್ವಜ್ಞ ||
ಅರ್ಥ: ಬೇಡರವನು ಒಳ್ಳೆಯವನೆಂದು ಸಭೆಯಲ್ಲಿ ಹೇಳಬೇಡ. (ಏಕೆಂದರೆ) ಅವನು ಬೇಡಿದ್ದನ್ನು (ನೀನು) ಕೊಡದೆ ಹೋದೆಯಾದರೆ ರಾತ್ರಿಯ ಸಮಯದಲ್ಲಿ ಗೋಡೆಗೆ ಕನ್ನವಿಕ್ಕುವನು.

ಸರ್ವಜ್ಞನ ವಚನಗಳು 199-201

199. ಹೆಂಡತಿಗೆ ಅಂಜುವ | ಗಂಡನಂ ಏನೆಂಬೆ |
ಹಿಂಡು ಕೋಳಿಗಳ ಮರಿ ತಿಂಬ ನರಿ, ನಾಯಿ |
ಕಂಡೋಡಿದಂತೆ ಸರ್ವಜ್ಞ ||
ಅರ್ಥ: ಹೆಂಡತಿಗೆ ಅಂಜುವಂಥ ಗಂಡನಿಗೆ ಏನೆನ್ನಬೇಕು? ಕೋಳಿಗಳ ಹಿಂಡನ್ನೇ ಮುರಿದು ತಿನ್ನುವ ನರಿಯು ನಾಯಿಯನ್ನು ಕಂಡು ಓಡಿದ ಹಾಗೆಯೇ ಸರಿ.

AMAZING BOOK

200. ವಾಜಿ ಹಾರುವದಲ್ಲ | ತೇಜಿ ಹೇರುವದಲ್ಲ |
ಗಾಜಿನ ಕುಣಿಕೆ ಮಣಿಯಲ್ಲ, ಅತ್ತಿ ಫಲ |
ಬೀಜದೊಳಗಲ್ಲ ಸರ್ವಜ್ಞ ||
ಅರ್ಥ: ಕುದುರೆಯು ಹಾರುವುದಕ್ಕಲ್ಲ, ಭಾರವನ್ನು ಹೊರುವುದಕ್ಕೂ ಅಲ್ಲ. ಗಾಜಿನ ಕುಣಿಕೆಯು ಮಣಿಯೂ ಅಲ್ಲ. (ಅದರಂತೆ) ಅತ್ತಿಯ ಹಣ್ಣು ಬೀಜದೊಳಗೆ ಎಣಿಸಲ್ಪಡುವುದಿಲ್ಲ.
201. ಗಾಣಿಗನು ಈಶ್ವರ | ಕಾಣನೆಂಬುದು ಸಹಜ |
ಏಣಾಂಕಧರನು, ಧರೆಗಿಳಿಯಲವನಿಂದ |
ಗಾಣವಾಡಿಸುವ ಸರ್ವಜ್ಞ ||
ಅರ್ಥ: ಗಾಣಿಗನು ಈಶ್ವರನನ್ನು ಕಂಡಿಲ್ಲವೆಂಬುದು ನಿಜ; (ಆದರೆ ಒಂದು ವೇಳೆ) ಮಹದೇವನೇ ಅವನ ಬಳಿ ಇರುವುದಾದರೆ (ಗಾಣಿಗನು) ಶಿವನಿಗೂ ಗಾಣ ತಿರುಗಿಸಲು ಹಚ್ಚದೇ ಬಿಡಲಾರನು.

ಶುಕ್ರವಾರ, ಅಕ್ಟೋಬರ್ 2, 2015

ಸರ್ವಜ್ಞನ ವಚನಗಳು 196-198

196. ಹರದನ ಮಾತನ್ನು | ಹಿರಿದು ನಂಬಲು ಬೇಡ |
ಗರಗಸದೊಡನೆ ಮರಹೋರಿ, ತನ್ನ ತಾ |
ನಿರಿದುಕೊಂಡಂತೆ ಸರ್ವಜ್ಞ ||
ಅರ್ಥ: ವ್ಯಾಪಾರಸ್ಥನ ಮಾತಿನಲ್ಲಿ ಹೆಚ್ಚಿನ ನಂಬಿಕೆಯನ್ನಿರಿಸಬೇಡ. (ಒಂದು ವೇಳೆ ಹಾಗೆ ಮಾಡಿದರೆ) ಗರಗಸದೊಂದಿಗೆ ಕಟ್ಟಿಗೆಯ ತುಂಡು ಹೋರಾಡಿ ತನ್ನನ್ನೇ ತಾನು ಇರಿದುಕೊಂಡು ನಾಶವಾದಂತಾಗುತ್ತದೆ.

Pen Camera Video Recorder

197. ಪಂಚಾಳರೈವರು | ವಂಚನೆಗೆ ಗುರುವರು |
ಕಿಂಚಿತ್ತು ನಂಬಿ ಕೆಡಬೇಡ, ತಿರುಗುಣಿಯ |
ಮಂಡದಂತಿಹರು ಸರ್ವಜ್ಞ ||
ಅರ್ಥ: ಐದು ವಿಧಧ ಪಂಚಾಳರು ವಂಚಕತನದಲ್ಲಿ ಎತ್ತಿದ ಕೈಯಾಗಿರುತ್ತಾರೆ. (ಅದಕ್ಕಾಗಿ ಅವರನ್ನು) ಎಳ್ಳಷ್ಟೂ ನಂಬಿ ಕೆಡಬೇಡ; ಅವರು ತಿರುಗುಣಿಯ ಮಾಡುವಿನಂತಿರುತ್ತಾರೆ.
198. ಕಳ್ಳನೂ ಒಳ್ಳಿದರೂ | ಎಲ್ಲ ಜಾತೆಯೊಳಿಹರು |
ಕಳ್ಳನೊಂದಡೆ ಉಪಕಾರಿ, ಪಾಂಚಾಳ |
ನೆಲ್ಲರಲಿ ಕಳ್ಳ ಸರ್ವಜ್ಞ ||
ಅರ್ಥ: ಒಳ್ಳೆಯವರು ಹಾಗೂ ಕಳ್ಳವರು ಎಲ್ಲ ಜಾತಿಗಳಲ್ಲಿಯೂ ಇರುತ್ತಾರೆ. (ಕೆಲ ಸಮಯಗಳಲ್ಲಿ) ಕಳ್ಳನಿಂದ ಉಪಕಾರವಾದರೂ ಆಗಬಹುದು. (ಆದರೆ) ಪಂಚಾಳರು (ಬಡಿಗ, ಹಜಾಮ, ಅಗಸ, ನೇಕಾರ, ಮಚೆಗಾರ ಇವರಿಗೆ ಪಂಚಾಳರು ಅನ್ನುತ್ತಾರೆ) ಎಲ್ಲರಿಗಂತ ಹೆಚ್ಚಿನ ಕಳ್ಳರು.

ಸರ್ವಜ್ಞನ ವಚನಗಳು 193-195

193. ಹಣಜಿ ಬತ್ತವು ಅಲ್ಲ | ಅಣಬೆ ಸತ್ತಿಗೆಯಲ್ಲ |
ಕಣಕದ ಕಲ್ಲು ಮಣಿಯಲ್ಲ, ಬಣಜಿಗನು |
ಗುಣವಂತನಲ್ಲ ಸರ್ವಜ್ಞ ||

ಅರ್ಥ: ಹಣಜಿಯು (ಒಂದು ತರಹದ ಕಲ್ಲು) ಬತ್ತವಾಗಲಾರದು. ನಾಯಿ ಕೊಡೆಯು ಕೊಡೆಯಾಗಲಾರದು. ಕಣಕವನ್ನರಿಯುವ ಕಲ್ಲು ಮಣಿಯಾಗಬಾರದು. ಅದರಂತೆ ಬಣಜಿಗನು ಗುಣವಂತನಾಗಲಾರನು.

194. ಎಳ್ಳು ಗಾಣಿಗಬಲ್ಲ | ಸುಳ್ಳು ಸಿಂಪಿಗ ಬಲ್ಲ |
ಕಳ್ಳರನು ಬಲ್ಲ ತಳವಾರ, ಬಣಜಿಗನು |
ಎಲ್ಲ ಬಲ್ಲ ಸರ್ವಜ್ಞ ||

ಅರ್ಥ: ಗಾಣಿಗರವನು ಎಳ್ಳನ್ನೂ, ಸಿಂಪಿಗರನು ಸುಳ್ಳು ಹೇಳುವುದನ್ನೂ ಹಾಗೂ ತಳವಾರನು (ವಾಲೀಕಾರ) ಕಳ್ಳನನ್ನೂ ಬಲ್ಲವನಾದರೆ ಬಣಜಿಗನು ಮಾತ್ರ ಎಲ್ಲರನ್ನೂ ಬಲ್ಲವನಾಗಿರುತ್ತಾನೆ.

195. ಕೊಂಬು ಹೋರಿಗೆ ಲೇಸು | ತುಂಬು ಕೇರಿಗೆ ಲೇಸು |
ಕುಂಬಾರ ಲೇಸು ಊರಿಂಗೆ, ಹರದಂಗೆ |
ನಂಬುಗೆಯೇ ಲೇಸು ಸರ್ವಜ್ಞ ||

ಅರ್ಥ: ಹೋರಿಗೆ ಕೊಂಬುಗಳು, ಓಣಿಗೆ ಜನವಸತಿಯು, ಊರಿಗೆ ಕುಂಬಾರನು ಶೋಭಾಯಮಾನವಾಗುವಂತೆ ವ್ಯಾಪಾರಸ್ಥನಿಗೆ ನಂಬುಗೆಯೇ ಭೂಷಣವು.

ಗುರುವಾರ, ಅಕ್ಟೋಬರ್ 1, 2015

ಸರ್ವಜ್ಞನ ವಚನಗಳು 190-192

190. ಬೂದಿಯೊಳು ಹುದುಗಿಸುತ | ವೇದಿಸುತ ಮರೆಮಾಡಿ |
ಕಾದಿರ್ದ ಚಿನ್ನದೊಳು ಬೆರೆಸಿ, ಒರೆಹಚ್ಚಿ |
ಊದುತಲೆ ಟೊಣೆವ ಸರ್ವಜ್ಞ ||

ಅರ್ಥ: (ಬಂಗಾರವನ್ನು) ಬೂದಿಯೊಳಗೆ ಮುಚ್ಚಿಡುತ್ತ (ಗಿರಾಕಿ) ನೋಡುತ್ತಿರುವಂತೆಯೆ ಮರೆಮಾಡಿ ಕಾಯ್ದ ಬಂಗಾರದೊಳಗೆ ಕುದಿಸಿ ಒರೆಹಚ್ಚಿ ಊದುತ್ತಿರುವಂತೆಯೇ (ಅಕ್ಕಸಾಲಿಗನು) ಹಾರಿಸಿಬಿಡುವನು.

191. ಅಕ್ಕಸಾಲೆಯ ಮಗುವು | ಚಿಕ್ಕದೆಂದೆನಬೇಡ |
ಚಿಕ್ಕಟವು ಮೈಯ್ಯ ಕಡಿವಂತೆ, ಚಿಮ್ಮಟವ |
ನಿಕ್ಕುತ್ತಲೆ ಕಳೆವ ಸರ್ವಜ್ಞ ||

ಅರ್ಥ: ಅಕ್ಕಸಾಲಿಗನ ಮಗನನ್ನು ಚಿಕ್ಕವನೆಂದು ಭಾವಿಸಬೇಡ. ಅತಿ ಚಿಕ್ಕದಾದ ಚಿಕ್ಕಾಡು ಮೈತುಂಬ ಕಡಿವಂತೆ ಅವನು (ಚಿಮ್ಮಟಗೆ ಬರುತ್ತಲೇ) ತನ್ನ 'ಉದ್ಯಮ' ವನ್ನು ಪ್ರಾರಂಭಿಸುವನು.

192. ಅಡ್ಡ ಬಡ್ಡಿಯೂ ಹೊಲ್ಲ | ಗಿಡ್ಡ ಬಾಗಿಲ ಹೊಲ್ಲ |
ಹೆಡ್ಡರೊಡನಾಟ ಹೊಲ್ಲ, ಬಡಿಗ ತಾ |
ರೊಡ್ಡನಿರೆ ಹೊಲ್ಲ ಸರ್ವಜ್ಞ ||

ಅರ್ಥ: ಅಡ್ಡವಾದಂಥ ಬಡ್ಡೆಯು ಅಯೋಗ್ಯವಾದುದು. ಮೂರ್ಖರ ಸಂಗವು ಒಳ್ಳೆಯದಲ್ಲ. ಅದರಂತೆ ಎಡಗೈಯಿಂದ ಕೆಲಸ ಮುಡುವಂಥ ಬಡಿಗನೂ ನಿರುಪಯೋಗಿಯು.

ಸರ್ವಜ್ಞನ ವಚನಗಳು 187-189

187. ಉದ್ದರಿಯ ಕೊಟ್ಟಣ್ಣ | ಹದ್ದಾದ ಹಾವಾದ |
ಎದ್ದೆದ್ದು ಹರಿವ ನಾಯಾದ, ಹುತ್ತದ |
ಗೊದ್ದದಂತಾದ ಸರ್ವಜ್ಞ ||
Click here to Browse free internet
ಅರ್ಥ: (ಯಾವುದಾದರೊಂದು) ಉದ್ದರಿಯಾಗಿ ಕೊಟ್ಟಂಥವನು ಹದ್ದಿನಂತೆ, ಹಾವಿನಂತೆ ಹಾಗೂ ಎದ್ದೆದ್ದು ಕಚ್ಚಲು ಬರುವ ನಾಯಿಯಂತಾಗುವನಲ್ಲದೆ ಹುತ್ತದೊಳಗಿನ ಇರುವೆಯಂತೆಯೂ ಆಗುತ್ತಾನೆ.
188. ಹಾಲು ಬೋನಕೆ ಲೇಸು | ಮಾಲೆ ಕೊರಳಿಗೆ ಲೇಸು |
ಸಾವಿಲ್ಲದವನ ಮನೆ ಲೇಸು, ಬಾಲರ |
ಲೀಲೆ ಲೇಸೆಂದ ಸರ್ವಜ್ಞ ||
ಅರ್ಥ: (ಊಟಕ್ಕೆ) ಹಾಲು ಬಹಳ ಒಳ್ಳೆಯದು. (ಹೂವಿನ) ಮಾಲೆಯು ಕೊರಳಿಗೆ ಶೋಭೆಯನ್ನುಂಟು ಮಾಡುವುದು. ಯಾರ ಮನೆಯಲ್ಲಿ ಸಾವೇ ಕಂಡಿಲ್ಲವೋ ಅಂಥ ಮನೆ ಲೇಸು. (ಅದರಂತೆ) ಚಿಕ್ಕ ಬಾಲಕರ ಲೀಲೆಯು ಇನ್ನೂ ಒಳ್ಳೆಯದು (ಮನಕ್ಕೆ ಆಹ್ಲಾದ ನೀಡುವುದು).
189. ಅಕ್ಕಸಾಲೆಯನೂರಿ | ಗೊಕ್ಕಲೆಂದೆನಬೇಡ |
ಬೆಕ್ಕುಬಂದಿಲಿಯ ಹಿಡಿವಂತೆ, ಊರಿಗವ |
ರಕ್ಕಸನು ನೋಡ ಸರ್ವಜ್ಞ ||
ಅರ್ಥ: ಅಕ್ಕಸಾಲಿಗನನ್ನು ಒಂದೂರಿನ ಒಕ್ಕಲು ಮನೆತನಸ್ಥ ಎಂದು ಭಾವಿಸಬೇಡ. ಬೆಕ್ಕು (ಸದ್ದಿಲ್ಲದೇ) ಬಂದು ಇಲಿಯನ್ನು ಹಿಡಿದು ತಿನ್ನುವಂತೆ ಅವನು (ಅಕ್ಕಸಾಲಿಗನು) ಊರಿಗೊಬ್ಬ ರಾಕ್ಷಸನಿದ್ದಂತೆ (ಆಗುವನು).

ಬುಧವಾರ, ಸೆಪ್ಟೆಂಬರ್ 30, 2015

ಸರ್ವಜ್ಞನ ವಚನಗಳು 184-186

184. ಸಾಲವನು ತರುವಾಗ | ಹಾಲುಬೋನುಂಡಂತೆ |
ಸಾಲಿಗನು ಬಂದು ಕೇಳಿದರೆ, ಕುಂಡೆಗೆ |
ಚೇಳು ಕಡಿದಂತೆ ಸರ್ವಜ್ಞ ||

ಅರ್ಥ: (ಎರಡನೆಯವರಿಂದ) ಸಾಲವನ್ನು ತೆಗೆದುಕೊಂಡು ಬರುವಾಗ ಹಾಲು-ಅನ್ನವನ್ನು ಉಂಡಂತಾಗುತ್ತದೆ. (ಆದರೆ) ಅದನ್ನೇ ಅವನು ಮರಳಿ ಕೇಳಲು ಬಂದಾಗ (ಮಾತ್ರ) ತಿಗಕ್ಕೆ ಚೇಳು ಕಡಿದಂತಾಗುತ್ತದೆ.

185. ನೂರು ಹಣ ಕೊಡುವ ತನಕ | ಮೀರಿ ವಿನಯದಲಿಪ್ಪ |
ನೂರರೋಳ್ಮೂರ ಕೇಳಿದರೆ, ಸಾಲಿಗನು |
ತೂರುವನು ಮಣ್ಣು ಸರ್ವಜ್ಞ ||

ಅರ್ಥ: ಸಾಲವನ್ನು ಕೊಡುತ್ತಿರುವವರೆಗೆ ಅದು ನೂರಿರಲಿ, ಎಷ್ಟೇ ಇರಲಿ ಅವನೊಂದಿಗೆ (ಸಾಲ ತೆಗೆದುಕೊಳ್ಳುವವನು) ಅತಿಯಾದ ವಿನಯದಿಂದ ನಡೆದುಕೊಳ್ಳುತ್ತಾನೆ; ಆದರೆ (ಕೊಟ್ಟವನು ತಾನು ಕೊಟ್ಟಿದ್ದರಲ್ಲಿಯ ಕೇವಲ) ಎರಡು-ಮೂರು ರೂಪಾಯಿಗಳನ್ನು ಮರಳಿ ಕೇಳಿದರೆ ಮಾತ್ರ ಅವನ ಮೇಲೆ ಮಣ್ಣು ತೂರಲು ಪ್ರಾರಂಭಿಸುವನು.

186. ಗಡ್ಡವಿಲ್ಲದವನ ಮೋರೆ | ದುಡ್ಡು ಇಲ್ಲದ ಚೀಲ |
ಬಡ್ಡಿ ಸಾಲ ತರುವವನ, ಬಾಳುವೆಯು |
ಅಡ್ಡಕ್ಕೂ ಬೇಡ ಸರ್ವಜ್ಞ ||

ಅರ್ಥ: ಗಡ್ಡವಿಲ್ಲದವನ ಮೋರೆಯು (ಮುಖವು) ಹಣವಿಲ್ಲದಂಥ ಬರಿಯ ಚೀಲವು ಹಾಗೂ ಬಡ್ಡಿಯ ಸಾಲವನ್ನು ತರುತ್ತಲೇ ಇರುವಂಥವನ ಬಾಳುವೆಯು ಇವು ಮೂರು ಯಾತಕ್ಕೂ ಬೇಡ.

ಸರ್ವಜ್ಞನ ವಚನಗಳು 181-183

181. ಅಕ್ಕಿಯನು ಬೀಯಂಬ | ಬೆಕ್ಕನ್ನು ಪಿಲ್ಲೆಂಬ |
ಚೊಕ್ಕಟದ ತೇಜಿಗೆ ಕುರ್ರೆಂಬ, ತೆಲುಗನ |
ಸೊಕ್ಕು ನೋಡೆಂದ ಸರ್ವಜ್ಞ ||

ಅರ್ಥ: ಅಕ್ಕಿಗೆ 'ಬಿ' ಎನ್ನುವ ಬೆಕ್ಕಿಗೆ 'ಪಿಲ್ಲಿ' ಎಂಬುವ ಹಾಗೂ ಚೊಕ್ಕಟವಾದ ಕುದುರೆಗೆ 'ಕುರ್ರಂ' ಎನ್ನುವಂಥ ಆಂಧ್ರನ (ತೆಲುಗನ) ಸೊಕ್ಕು ಎಷ್ಟಿರಬೇಕು?.

182. ತಿಗುಳಿ ಜನ ಗೆಣೆಯಿಂದ | ಬೊಗಳುವಾ ಶುನಿ ಲೇಸು |
ಮುಗುಳಿಯ ಮರದ ನೆರಳಿಂದ, ನುಂಗುವ |
ನೆಗಳು ಲೇಸೆಂದ ಸರ್ವಜ್ಞ ||

ಅರ್ಥ: ತಿಗಳು ಜನರು (ತಮಿಳರ) ಗೆಳೆತನಕ್ಕಿಂತ ಬೊಗಳುವ ನಾಯಿಯೇ ಒಳ್ಳೆಯದು. (ಅದರಂತೆ) ಮುಗುಳಿಯ (ಒಂದು ಜಾತಿಯ ಜಾಲಿಯ ಮರ) ಮರದ ನೆರಳಿಗಿಂತ ನುಂಗಿ ಬಿಡುವಂಥ ಮೊಸಳೆ ಉತ್ತಮ.

183. ಹರಳು ಕಾಲಿಗೆ ಹಿಲ್ಲ | ಹುರುಳಿ ಕತ್ತೆಗೆ ಹೊಲ್ಲ |
ಇರುಳೊಳು ಪಯಣ ಬರೆಹೊಲ್ಲ, ತೊತ್ತಿಂಗೆ |
ಕುರುಳು ತಾ ಹೊಲ್ಲ ಸರ್ವಜ್ಞ ||

ಅರ್ಥ: ಕಾಲಿಗೆ ಹರಳು ಅನಾವಶ್ಯಕ, ಕತ್ತೆಹುರುಳಿಯು ಅನಾವಶ್ಯಕ, ರಾತ್ರಿಯಲ್ಲಿನ ಪ್ರಯಾಣವು ಅಯೋಗ್ಯವಾದುದು. (ಅದರಂತೆ) ಸೇವಕಿಗೆ ಮುಂಗುರುಳುಗಳು ಗಂಡಾಂತರಕಾರವಾಗಿದೆ.

ಸರ್ವಜ್ಞನ ವಚನಗಳು 178-180

178. ತುಂಬಿದಾ ಕೆರೆಬಾವಿ | ತುಂಬಿದಂತಿರುವುದೇ?
ನಂಬಿರಬೇಡ ಲಕ್ಷ್ಮಿಯನು, ಬಡತನವು |
ಬೆಂಬಿಡದೆ ಬಹುದು ಸರ್ವಜ್ಞ ||

ಅರ್ಥ: ತುಂಬಿದಂಥ ಕೆರೆ, ಬಾವಿಗಳು ಯಾವಾಗಲೂ ತುಂಬಿಕೊಂಡೇ ಇರುವುವೇ? (ಸಾಧ್ಯವಿಲ್ಲ) ಅದರಂತೆ ಐಶ್ವರ್ಯವನ್ನು ನಂಬಬೇಡ, ಸಿರಿಯ ಹಿಂದೆ ಬಡತನವು ಬಂದೇ ಬರುವುದು.

179. ಉದ್ದಾದ ಮೊಲೆ ಹೊಲ್ಲ | ಇದ್ದೂರ ಹಗೆ ಹೊಲ್ಲ |
ತಿದ್ದದ ಹೋರಿ ಉಳ ಹೊಲ್ಲ, ಬಡವಂತೆ |
ಬಿದ್ದ ನಡು ಹೊಲ್ಲ ಸರ್ವಜ್ಞ ||

ಅರ್ಥ: (ಅತಿಶಯ) ಉದ್ದವಾದ ಮೊಲೆಗಳು ಅನವಶ್ಯಕ, ಇದ್ದೂರಲ್ಲಿ ದ್ವೇಷವನ್ನು ಬೆಳೆಸುವುದು ಅಪಾಯಕರ. ಕೆಲಸಕ್ಕೆ ಬರುವಂತೆ ಅಳವಡಿಸಿಕೊಳ್ಳಲಾರದಂಥ ಹೋರಿಯು ಬಿತ್ತನೆಯ ಕೆಲಸಕ್ಕೆ ನಿರುಪಯೋಗಿಯು. (ಅದರಂತೆ) ನಡುಬಾಗಿದರೆ ಬಡವನು ನಿರುಪಯೋಗಿಯಾಗುತ್ತಾನೆ.

180. ಹುಣಸೆಯಿಂ ನೊರೆವಾಲು | ಗಣಿಕೆಯಿಂ ಹಿರಿತನವು |
ಮೆಣಸಿನಿಂ ಕದಳಿ ಕೆಡುವಂತೆ, ಬಡವ ತಾ |
ಸೆಣಸಿನಿಂ ಕೆಡಗು ಸರ್ವಜ್ಞ ||

ಅರ್ಥ: ಹುಣಸೆಯ ಹುಳಿಯಿಂದ ಹಾಲು, ಸೂಳೆಯಿಂದ (ಮನೆಯು) ಹಿರಿತನವು ಮೆಣಸಿನಿಂದ ಬಾಳೆಯು ಕೆಡುವಂತೆ ಬಡವನು (ತನ್ನಲ್ಲಿಯ) ಸಿಡುಕಿನಿಂದ ಕೆಡುತ್ತಾನೆ.

ಸರ್ವಜ್ಞನ ವಚನಗಳು 175-177

175. ಬೆಕ್ಕು ಮನೆಯೊಳುಲೇಸು | ಮುಕ್ಕು ಕಲ್ಲಿಗೆ ಲೇಸು |
ನಕ್ಕು ನಗಿಸುವ ನುಡಿಲೇಸು, ಊರಿಗೆ |
ಒಕ್ಕಲಿಗ ಲೇಸು ಸರ್ವಜ್ಞ ||

ಅರ್ಥ: ಮನೆಯೊಳಗೆ ಬೆಕ್ಕು ಇದ್ದರೆ ಒಳ್ಳೆಯದು. (ಕಾಳಿನ) ಮುಕ್ಕು (ಬೀಸುವ) ಕಲ್ಲಿಗೆ ಶೋಭೆಯು ಹಾಗೂ ತಾನು ನಕ್ಕು ಇತರರನ್ನು ನಗಿಸುವಂಥ ಮಾತುಗಳು ಬಹಳ ಒಳ್ಳೆಯವು. (ಅದರಂತೆ) ಊರಿಗೆ ಒಕ್ಕಲಿಗನೇ ಭೂಷಣನು.

176. ತರುಕರುವು ಇರದೂರು | ನರಕಭಾಜನಮಕ್ಕು |
ತರುಕರುಂಟಾದರುಣಲುಂಟು, ಜಗಕ್ಕೆಲ್ಲ |
ತರುಕರವೆ ದೈವ ಸರ್ವಜ್ಞ ||

ಅರ್ಥ: ಹೈನವನ್ನೀಯುವ ದನಕರುಗಳು ಇಲ್ಲದಂಥ ಊರುಗಳು ನರಕ ಸಮಾನವೆಂದೇ ಹೇಳಬೇಕು. ಅಂಥ ದನಕರುಗಳಿದ್ದರೆ ಊಟ ಕೊರತೆ ಇರುವುದಿಲ್ಲ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಜಗತ್ತಿಗೆಲ್ಲ ದನಕರುಗಳೇ ದೇವ.

177. ಅಂಗನೆಯು ಗುಣಿಯಾಗಿ | ಅಂಗಳಕೆ ಹೊರಸಾಗಿ |
ತಂಗಾಳಿ ಜೊನ್ನದಿರುಳಾಗಿ, ಬೇಸಿಗೆಯು |
ಹಿಂಗದೇ ಇರಲಿ ಸರ್ವಜ್ಞ ||

ಅರ್ಥ: ಸದ್ಗುಣಿಯಾದ ಹೆಂಡತಿಯಿರಬೇಕು. (ಮಲಗಲು) ಅಂಗಳದಲ್ಲಿ ಹೊರಸಿರಬೇಕು ಹಾಗೂ ತಂಗಾಳಿಯನ್ನೀಯುವ ಬೆಳದಿಂಗಳಿನ ರಾತ್ರಿಯಾಗಿರಲು ಸದಾಕಾಲ ಬೇಸಿಗೆಯೇ ಇರಲಿ (ಎಂದು ಹೇಳುವುದು ಸ್ವಾಭಾವಿಕ) .

ಮಂಗಳವಾರ, ಸೆಪ್ಟೆಂಬರ್ 29, 2015

ಸರ್ವಜ್ಞನ ವಚನಗಳು 172-174

172. ಮತ್ತೊಮ್ಮೆ ಹರಗದಲೆ | ಬಿತ್ತೊಮ್ಮೆ ನೋಡದಲೆ | ಹೊತ್ತೇರಿ ಹೊಲಕೆ ಹೋದರೆ, ಅವ ತನ್ನ | ನೆತ್ತರವ ಸುಡುವ ಸರ್ವಜ್ಞ || ಅರ್ಥ: ಬಿತ್ತುವ ಪೂರ್ವದಲ್ಲಿ ಒಂದು ಸಲ ಹರಗದೆ, ಬಿತ್ತಿದ ನಂತರ ಒಂದು ಸಲ ನೋಡದೆ, ಮತ್ತು ಹೊತ್ತು ಏರಿದ ನಂತರ ಹೊಲಕ್ಕೆ ಹೋಗುವಂಥವನು ತನ್ನ ರಕ್ತವನ್ನು ತಾನೇ ಸುಟ್ಟುಕೊಂಡಂತೆ. 173. ಹರಗದ ಎತ್ತಾಗೆ | ಬರಡಾದ ಹಯನಾಗೆ | ಹರಟೆ ಹೊಡೆಯು ಮಗನಾಗೆ, ಹೊಲದಲ್ಲಿ | ಕರಡವೇ ಬೆಳಗು ಸರ್ವಜ್ಞ || ಅರ್ಥ: (ಹೊಲವನ್ನು) ಹರಗದಂಥ ಎತ್ತುಗಳು, (ಮನೆಯಲ್ಲಿ) ಹಿಡಿಲಾರದಂಥ ಎಮ್ಮೆ-ಆಕಳುಗಳು, ಹಾಳು-ಹರಟೆಯಲ್ಲಿಯೇ ಹೊತ್ತು ಕಳೆಯುವಂಥ ಮಗನು ಇದ್ದುದಾದರೆ ಹೊಲದಲ್ಲಿ ಹುಲ್ಲಿನ ಹೊರತು ಮತ್ತೇನನ್ನು ಬೆಳೆಯಲು ಸಾಧ್ಯವಿಲ್ಲ. 174. ದಂಡು ಇಲ್ಲದ ಅರಸು | ಕುಂಡವಿಲ್ಲದ ಹೋಮ | ಬಂಡಿಯಿಲ್ಲದ ಬೇಸಾಯ, ತಲೆಹೋದ | ಮುಂಡದಂತಿಕ್ಕು ಸರ್ವಜ್ಞ || ಅರ್ಥ: ಸೈನ್ಯವಿರದೆ ಇದ್ದ ಅರಸನು, ಕುಂಡವಿಲ್ಲದಂಥ ಯಜ್ಞವು ಹಾಗೂ ಚಕ್ಕಡಿ ಇಲ್ಲದಂಥವನ ಬೇಸಾಯವು (ಒಕ್ಕಲುತನ) ಇವು ಮೂರು ತಲೆಯಿಲ್ಲದವನ ಮುಂಡದಂತೆಯೇ ಸರಿ.

ಸರ್ವಜ್ಞನ ವಚನಗಳು 169-171

169. ಹೊತ್ತಿಗೊದಗಿದ ಮಾತು | ಸತ್ತವನು ಎದ್ದಂತೆ |
ಹೊತ್ತಾಗಿ ನುಡಿದ ಮಾತು, ಕೈಜಾರಿದ |
ಮುತ್ತಿನಂತಿಹುದು ಸರ್ವಜ್ಞ ||

ಅರ್ಥ: ಸಮಯೋಚಿತವಾಗಿ ಬಂದ ಮಾತು, ಸತ್ತವನು ಎದ್ದು ಬಂದಷ್ಟು ಒಳ್ಳೆಯದಾಗುತ್ತದೆ. ಆದರೆ ಸಮರ ಮೀರಿದ ನಂತರ ಆಡಿದ ಮಾತು ಕೈಜಾರಿ ಕೆಳಗೆ ಬಿದ್ದ ಮುತ್ತಿನಂತಾಗುತ್ತದೆ.

170. ಮಾತಿಂಗೆ ಮಾತುಗಳು | ಓತುಸಾಸಿರವುಂಟು |
ಮಾತಾಡಿದಂತೆ ನಡೆದಾತ, ಜಗವನು |
ಕೂತಲ್ಲಿಯೇ ಆಳ್ವ ಸರ್ವಜ್ಞ ||

ಅರ್ಥ: ಮಾತಿಗೆ ಮಾತಾಗಿ ಸಂಗ್ರಹಿಸಿದ್ದು ಸಾವಿರದಷ್ಟಿದ್ದರೂ ಮಾತಾಡಿದಂತೆ ನಡೆಯುವಂಥವನು ಕುಳಿತಲ್ಲಿಯೇ ಎಲ್ಲವನ್ನೂ ನಡೆಸಿಕೊಂಡು ಹೋಗಬಲ್ಲನು.

171. ಕೋಟಿ ವಿದ್ಯೆಗಳಲ್ಲಿ | ಮೇಟಿವಿದ್ಯಯೇ ಮೇಲು |
ಮೇಟಿಯಿಂ ರಾಟಿ ನಡೆದುದಲ್ಲದೆ, ದೇಶ |
ದಾಟವೆ ಕೆಡಗು ಸರ್ವಜ್ಞ ||

ಅರ್ಥ: ಕೋಟಿ ವಿದ್ಯೆಗಳಲ್ಲಿ ಒಕ್ಕಲುತನದ ಉದ್ಯೋಗವೇ ಮಿಗಿಲಾದದ್ದು. ಅದರಿಂದಲೇ ಉಳಿದೆಲ್ಲ ವ್ಯವಸಾಯಗಳು ನಡೆಯುವತ್ತವೆ. ಅದಿಲ್ಲದಿದ್ದರೆ ದೇಶವೇ ತಲೆಕೆಳಗಾಗುತ್ತದೆ.

Page Redirection

ಸೋಮವಾರ, ಸೆಪ್ಟೆಂಬರ್ 28, 2015

ಸರ್ವಜ್ಞನ ವಚನಗಳು 166-168

166. ಮಾತುಬಲ್ಲಾತಂಗೆ | ಯೇತವದು ಸುರಿದಂತೆ | ಮಾತಾಡಲರಿಯದಾತರಿಗೆ ಬರಿಯೇ ತ | ನೇತಾಡಿದಂತೆ ಸರ್ವಜ್ಞ || ಅರ್ಥ: ಮಾತು ಬಲ್ಲವನಿಗೆ ಕಪ್ಪಲಿಯ ನೀರು ಸುರಿದಂತೆ.ಆದರೆ ಮಾತನಾಡಲು ಅರಿಯದವನಿಗೆ ಬರಿಯ ಕಪ್ಪಲಿಯು ಜೋತು ಬಿದ್ದಂತೆಯೇ ಸರಿ. 167. ಮಾತು ಬಲ್ಲಹ ತಾನು | ಸೋತು ಹೋಹುದು ಲೇಸು | ಮಾತಿಂಗೆ ಮಾತು ಮಥಿಸಲ್ಕೆ, ವಿಧಿ ಬಂದು | ಆತುಕೊಂಡಿಹುದು ಸರ್ವಜ್ಞ || ಅರ್ಥ: ಮಾತು ಬಲ್ಲಂಥವನು (ಪ್ರಸಂಗ ಬಂದಾಗ) ಸೋತು ಹೋಗುವುದೇ ಒಳ್ಳೆಯದು. (ಇಲ್ಲದಿದ್ದರೆ) ಮಾತಿಗೆ ಮಾತು ಬೆಳೆಯಲು ವಿರಸ ಉಂಟಾಗುತ್ತದೆ. ಇಂಥ ಸಮಯವನ್ನೇ ಕಾಯುತ್ತ ವಿಧಿಯು ಕುಳಿತುಕೊಂಡಿರುತ್ತದೆ. 168. ರಸಿಕನಾಡಿದ ಮಾತು | ಶಶಿಯುದಿಸಿ ಬಂದಂತೆ | ರಸಿಕನಲ್ಲದನ ಬರಿ ಮಾತು, ಕಿವಿಗೆ ಕೂರ್ | ದಶಿಯು ಬಡಿದಂತೆ ಸರ್ವಜ್ಞ || ಅರ್ಥ: ರಸಿಕನಾಡಿದಂಥ ಮಾತುಗಳು ಚಂದ್ರನುದಯಿಸಿ ಬಂದಷ್ಟು ಸಂತಸವನ್ನೀಯುತ್ತದೆ. ಆದರೆ ರಸಿಕನಲ್ಲದವನ ಮಾತುಗಳಿಂದ ಮಾತ್ರ ಕಿವಿಯಲ್ಲಿ ಚೂಪಾದ ಗೂಟವನ್ನು ಹೊಡೆದಂತಾಗುತ್ತದೆ.

ಸರ್ವಜ್ಞನ ವಚನಗಳು 163-165

163. ಹೊತ್ತಿಗೆ ಮಾತು | ಹತ್ತು ಸಾವಿರ ವ್ಯರ್ಥ |
ಕತ್ತೆ ಕೂಗಿದರೆ ಫಲಳುಂಟು, ಬಹುಮಾತು |
ಕತ್ತೆಗೂ ಕಷ್ಟ ಸರ್ವಜ್ಞ ||

ಅರ್ಥ: ಹೊತ್ತಿಗೆ ಒದಗಲಾರದಂಥ ಹತ್ತು ಸಾವಿರ ಮಾತುಗಳಿದ್ದರೂ ವ್ಯರ್ಥವೇ ಸರಿ. ಕತ್ತೆಯು ಕಿರುಚಿಕೊಂಡರೆ (ಒಂದುವೇಳೆ) ಫಲವುಂಟು. ಆದರೆ ಬಹಳ ಮಾತು ಕತ್ತೆಯ ಕೂಗಿಗಿಂತಲೂ ಕೀಳಾದದ್ದು.

164. ಹೊಲಬನರಿಯದ ಮಾತು | ತಲೆಬೇನೆ ಎದ್ದಂತೆ |
ಹೊಲಬನರಿತು ಒಂದು ನುಡಿದರೆ, ಅದು ದಿವ್ಯ |
ಫಲಪಕ್ವದಂತೆ ಸರ್ವಜ್ಞ ||

ಅರ್ಥ: ದಾರಿ ಬಿಟ್ಟು ಆಡಿದ ಮಾತುಗಳು ತಲೆನೋವು ಎದ್ದಂತೆ. (ಬೇಸರಿಕೆಯನ್ನುಂಟು ಮಾಡುವುದು). ಸರಿಯಾಗಿ ಆಡಿದ ಒಂದು ಮಾತು ಪಕ್ವವಾದ ಫಲದಂತೆ ದಿವ್ಯವಾಗಿರುತ್ತದೆ.

165. ಮಾತಿನಿಂ ನಡೆನುಡಿಯು | ಮಾತಿನಿಂ ಹಗೆ ಕೊಲೆಯು |
ಮಾತಿನಿಂ ಸರ್ವ ಸಂಪದವು, ಲೋಕಕ್ಕೆ |
ಮಾತೆ ಮಾಣಿಕವು ಸರ್ವಜ್ಞ ||

ಅರ್ಥ: ಮಾತಿನಿಂದಲೇ ನಡೆನುಡಿಗಳು, ಶತ್ರುವಿನ ಕೊಲೆಯು ಕೂಡ ಮಾತಿನಿಂದ ಹಾಗೂ ಮಾತಿನಿಂದಲೇ ಸರ್ವ ಸಂಪತ್ತು. (ಹೀಗಿರುವಾಗ ಮಾತೇ ಲೋಕಕ್ಕೆ ಮಾಣಿಕ್ಯವಾಗಿದೆ).

ಭಾನುವಾರ, ಸೆಪ್ಟೆಂಬರ್ 27, 2015

ಸರ್ವಜ್ಞನ ವಚನಗಳು 160-162

160. ಹೋರುವಾ ಸತಿಯಿಂದ | ಸೋರುವಾ ಮನೆಯಿಂದ |
ಪೂರೈಸದವನ ಬದುಕಿಂದ, ಕೊಂಡೊಯ್ವ |
ಮಾರಿ ಲೇಸೆಂದ ಸರ್ವಜ್ಞ ||

ಅರ್ಥ: (ಯಾವಾಗಲೂ) ಜಗಳವಾಡುವಂಥ ಹೆಂಡತಿಗಿಂತ, (ಮಳೆ ಬಂದಾಗ) ಸೋರುವ ಮನೆಗಿಂತ ಹಾಗೂ ಪೂರೈಸಲಾಗದ ಬದುಕಿಗಿಂತ ಒಮ್ಮೆಲೇ ಎತ್ತಿಕೊಂಡು ಹೋಗುವಂಥ ಮರಣವು (ಸಾವಿರ ಪಾಲಿಗೆ) ಉತ್ತಮವಾದದ್ದು.

161. ಪ್ರಾಸವಿಲ್ಲದ ಪದವ | ತಾಸು ಹಾಡಿದರೇನು |
ಸಾಸಿವೆ ಎಣ್ಣೆ ಹದಮಾಡಿ, ಕಣ್ಣಿಂಗೆ |
ಹೂಸಿಕೊಂಡಂತೆ ಸರ್ವಜ್ಞ ||

ಅರ್ಥ: ಪ್ರಾಸವಿಲ್ಲದ ಪದ್ಯವನ್ನು ತಾಸುಗಟ್ಟಲೇ ಹಾಡುವುದರಿಂದ ಫಲವೇನು ? (ಆ ರೀತಿ ಮಾಡುವುದೆಂದರೆ) ಹದಮಾಡಿದ ಸಾಸಿವೆಯ ಎಣ್ಣೆಯನ್ನು ಕಣ್ಣಿನೊಳಗೆ ಹಾಕಿಕೊಂಡಂತೆಯೇ ಸರಿ. (ಹಾಕಿಕೊಂಡರೂ ಅದು ವ್ಯರ್ಥ).

162. ಓದಿದಾ ಓದು ತಾ | ಮೇದ ಕಬ್ಬಿನ ಸಿಪ್ಪೆ |
ಓದಿನಾ ಒಡಲ ನರಿದಿಹರೆ, ಸಿಪ್ಪಿ ಕ |
ಬ್ಬಾದಂತೆ ಕಾಣೋ ಸರ್ವಜ್ಞ ||

ಅರ್ಥ: ಓದಿಕೊಂಡಂಥ ಪುಸ್ತಕವು ತಿಂದುಹಾಕಿದ ಕಬ್ಬಿನ ಸಿಪ್ಪೆಯಂತೆ. ಓದಿನೊಳಗಿನ ತಿರುಳನ್ನರಿತುಕೊಂಡರೆ ಆ ಸಿಪ್ಪೆಯೇ ಮರಳಿ ಕಬ್ಬಾದಂತೆ.

ಸರ್ವಜ್ಞನ ವಚನಗಳು 157-159

157. ಒಡಲೊಳಗಿನ ವಿದ್ಯೆ | ಒಡಗೂಡಿ ಬರುತಿರಲು |
ಒಡಹುಟ್ಟಿದವರು, ಕಳ್ಳರು, ನೃಪರದನು |
ಪಡೆಯರೆಂತೆಂದ ಸರ್ವಜ್ಞ ||

ಅರ್ಥ: ಒಡಲೊಳಗೆ ಅಡಗಿಕೊಂಡಂಥ ವಿದ್ಯೆಯು (ನಿನ್ನ) ಜೊತೆಗೇ ಬರುವುದು. (ಅದನ್ನು) ನಿನ್ನ ಒಡಹುಟ್ಟಿದವರಾಗಲಿ. ಕಳ್ಳಕಾಕರಾಗಲಿ, ಅರಸನಾಗಲಿ (ನಿನ್ನಿಂದ) ಕಸಿದುಕೊಳ್ಳಲಾರರು.

158. ವನಕ್ಕೆ ಕೋಗಿಲೆ ಲೇಸು | ಮನಕ್ಕೆ ಹರುಷವು ಲೇಸು |
ಕನಕವುಳ್ಳವನ ಕೆಳೆ ಲೇಸು, ವಿದ್ಯಕೆ |
ಅನುಭಾವಲೇಸು ಸರ್ವಜ್ಞ ||

ಅರ್ಥ: ವನದಲ್ಲಿ ಕೋಗಿಲೆ ಇದ್ದರೆ ಶೋಭೆ, ಮನಕ್ಕೆ ಸಂತೋಷವಿದ್ದರೆ ಒಳ್ಳೆಯದು. ಹಾಗೂ ಸಿರಿವಂತರ ಗೆಳೆತನ ಒಳ್ಳೆಯದು. ಅದರಂತೆ ವಿದ್ಯಕ್ಕೆ ಅಂಥಸ್ಪೂರ್ತಿಯಿದ್ದರೆ  ಒಳ್ಳೆಯದು (ಅತ್ಯಗತ್ಯ).

159. ಉದ್ಯೋಗವುಳ್ಳವನ | ಹೊದ್ದುವದು ಸಿರಿ ಬಂದು |
ಉದ್ಯೋಗವಿಲ್ಲದಿರುವವನ, ಕರದೊಳಗೆ |
ಇದ್ದದೂ ಪೋಪ ಸರ್ವಜ್ಞ ||

ಅರ್ಥ: (ಯಾವಾಗಲೂ) ಕೆಲಸ ಮಾಡುವವನ ಬಳಿ ಐಶ್ವರ್ಯವು ತಾನಾಗಿಯೇ ಬಂದು ಆಶ್ರಯಿಸುತ್ತದೆ. ಆದರೆ ನಿರುದ್ಯೋಗಿಯಾದವನ ಕೈಯಲ್ಲಿದ್ದ ಹಣ ಕೂಡ ಹೋಗಿಬಿಡುತ್ತದೆ.

ಶನಿವಾರ, ಸೆಪ್ಟೆಂಬರ್ 26, 2015

ಸರ್ವಜ್ಞನ ವಚನಗಳು 154-156

154. ಲೆತ್ತವದು ಒಳಿತೆಂದು | ನಿತ್ಯವಾಡಲು ಬೇಡ |
ಲೆತ್ತದಿಂ ಕುತ್ತು ಮುತ್ತಿ ಬರೆ, ಸುತ್ತಲೂ |
ಕತ್ತಲಾಗಿಹುದು ಸರ್ವಜ್ಞ ||

ಅರ್ಥ: ಪಗಡೆಯಾಟವು ಒಳ್ಳೆಯದೆಂದು ಪ್ರತಿನಿತ್ಯವು ಆಡಲಿಕ್ಕೆ ಹೋಗಬೇಡ. ಅದರಿಂದ ಸಂಕಟಗಳು ಪ್ರಾಪ್ತವಾಗಿ (ನಿನಗೆ ಎಲ್ಲೆಡೆಯೂ ಕತ್ತಲೆಯೇ ಕಂಡು ಬರುವುದು).

155. ವಿದ್ಯಕ್ಕೆ ಕಡೆಯಿಲ್ಲ | ಬುದ್ಧಿಗೆ ಬೆಲೆಯಿಲ್ಲ |
ಛಿದ್ರಿಸುವವಗೆ ಗತಿಯಿಲ್ಲ, ಮರಣಕ್ಕೆ |
ಮದ್ದುಗಳಿಲ್ಲ ಸರ್ವಜ್ಞ ||

ಅರ್ಥ: ವಿದ್ಯೆಗೆ ಕೊನೆಯೇ ಇಲ್ಲ. ಅದರಂತೆ ಬುದ್ಧಿಯೂ ಅಮೂಲ್ಯವಾದುದು. (ಅದಕ್ಕೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ) ಚಾಡಿಕೋರನಿಗೆ ಗತಿಯಿಲ್ಲ. ಮರಣಕ್ಕೆ ಯಾವ ಔಷಧಿಯೂ ಇಲ್ಲ.

156. ವಿದ್ಯೆವುಳ್ಳವನ ಮುಖವು | ಮುದ್ದು ಬರುವಂತಿಕ್ಕು |
ವಿದ್ಯೆಯಿಲ್ಲದವನ ಬರಿ ಮುಖವು, ಹಾಳೂರ |
ಹದ್ದಿನಂತಿಕ್ಕು ಸರ್ವಜ್ಞ ||

ಅರ್ಥ: ವಿದ್ಯಾವಂತನ ಮುಖವು ಎಲ್ಲರಿಗೂ ಮುದ್ದು ಬರುವಂತಿರುತ್ತದೆ. (ಆದರೆ) ವಿದ್ಯೆ ಇಲ್ಲದವನ ಬರಿಮುಖವು ಹಾಳೂರಿನೊಳಗಿರುವ ಹದ್ದಿನಂತಿರುತ್ತದೆ.

ಸರ್ವಜ್ಞನ ವಚನಗಳು 151-153

151. ವೀಳೆಯಿಲ್ಲದ ಬಾಯಿ | ಕೂಳು ಇಲ್ಲದ ನಾಯಿ |
ಬಾಳೆಗಳು ಇಲ್ಲದೆಲೆದೋಟ, ಪಾತರದ |
ಮೇಳ ಮುರಿದಂತೆ ಸರ್ವಜ್ಞ ||

ಅರ್ಥ: ವೀಳ್ಯವನ್ನು ಮೆಲ್ಲದಂಥ ಬಾಯಿ, ಕೂಳು ಇಲ್ಲದಂಥ ನಾಯಿ ಹಾಗೂ  ಬಾಳೆಯ ಗಿಡಗಳು ಇಲ್ಲದಂಥ ಎಲೆದೋಟ ಇವುಗಳು ಕುಣಿತದವರ ಮೇಳವು ಮುರಿದಂತೆ.

152. ಅಡಿಕೆ ಕಾಣದ ಬಾಯಿ | ಕುದುಕ ಕಾಣದ ಕಿವಿಯು |
ಒಡಕಿನ ಮನೆಯು ನಿಲುಕದಾ ಫಲಕೆ, ನರಿ |
ಮಿಡುಕಿ ಸತ್ತಂತೆ ಸರ್ವಜ್ಞ ||

ಅರ್ಥ: ಅಡಿಕೆ ಕಾಣದಂಥ ಬಾಯಿಯೂ, ಆಭರಣವನ್ನು ಕಾಣದಂಥ ಕಿವಿಯೂ ಹಾಗೂ ಸೋರುವಂಥ ಮನೆಯೂ (ಇವೆಲ್ಲ) ತನಗೆ ನಿಲುಕದಂಥ ಫಲಕ್ಕಾಗಿ ಮಿಡುಕಿದ ನರಿಯಂತೆಯೇ ಸರಿ.

153. ಲೆತ್ತವೂ ಕುತ್ತವೂ | ಹತ್ತಿದೊಡೆ ಅಳವಲ್ಲ |
ಕುತ್ತದಿಂ ದೇಹ ಬಡವಕ್ಕು, ಲೆತ್ತದಿಂ |
ಬತ್ತಲೆಯಕ್ಕು ಸರ್ವಜ್ಞ ||

ಅರ್ಥ: ಪಗಡೆ ಹಾಗೂ ರೋಗಿಗಳ ಸೋಂಕುವಿಕೆಯು ಒಳ್ಳೆಯದಲ್ಲ. ರೋಗದಿಂದ ಮನುಷ್ಯನ ದೇಹವು ಸೊರಗುತ್ತದೆ. ಪಗಡೆಯಾಟದಿಂದ ಅವನು ಎಲ್ಲವನ್ನು ಕಳೆದುಕೊಂಡು ಬತ್ತಲೆಯಾಗುತ್ತಾನೆ.

ಗುರುವಾರ, ಸೆಪ್ಟೆಂಬರ್ 24, 2015

ಸರ್ವಜ್ಞನ ವಚನಗಳು 148-150

148. ಹೆಂಡವನು ಸುರಿಸುರಿದು | ಕಂಡವರ ತಾ ಜರಿದು |
ಬಂಡು ನುಡಿಗಳನು, ಸುರಿಯುತ್ತಲಿರುವವನ |
ಕಂಡಿಹರೆ ತೊಲಗು ಸರ್ವಜ್ಞ ||

ಅರ್ಥ: ಮೇಲಿಂದ ಮೇಲೆ ಹೆಂಡವನ್ನು ಕುಡಿಯುತ್ತ ಕಂಡವರನ್ನು ಜರಿಯುತ್ತ ಬಾಯಿಂದ ಅಪದ್ಧ ಮಾತುಗಳನ್ನಾಡುತ್ತ ತಿರುಗುವನನ್ನು ಕಂಡರೆ ಅಲ್ಲಿ ನಿಲ್ಲಬೇಡ.

149. ನೀಚ ಜನ ನೆರೆಗಿಂತ | ಈಚಲದ ಮರ ಲೇಸು |
ಈಚಲೊಂದೆಡೆ ಉಪಕಾರಿ, ನೀಚ ತಾ |
ಈಚಲಿಂ ಕೆಟ್ಟ ಸರ್ವಜ್ಞ ||

ಅರ್ಥ: ನೀಚ ಮನುಷ್ಯನ ನೆರೆಹೊರೆಯದಲ್ಲಿರುವುದಕ್ಕಿಂತ ಈಚಲ ಮರವು ಎಷ್ಟೋ ಪಾಲು ಉತ್ತಮ. ಈಚಲ ಗಿಡವು ಒಂದಿಲ್ಲೊಂದು ಕೆಲಸಕ್ಕಾದರೂ (ನೆರಳು) ಬರುತ್ತದೆ. ಆದರೆ ನೀಚನು ಮಾತ್ರ ಈಚಲಿಗಿಂತಲೂ ಕೆಟ್ಟವನಾಗಿರುತ್ತಾನೆ.

150. ಗಾಳಿದೂಳಿಯ ದಿನಕೆ | ಮಾಳಿಗೆಯ ಮನೆಲೇಸು |
ಹೋಳಿಗೆ ತುಪ್ಪ ಉಣಲೇಸು, ಬಾಯಿಗೆ |
ವೀಳೆಯೇ ಲೇಸು ಸರ್ವಜ್ಞ ||

ಅರ್ಥ: ಗಾಳಿಯ ದಿನಗಳಲ್ಲಿ ಧೂಳಿನಿಂದ ರಕ್ಷಿಸಿಕೊಳ್ಳಲು ಮಾಳಿಗೆಯ ಮನೆಯು ಒಳ್ಳೆಯದು. ಊಟ ಮಾಡಲು ಹೋಳಿಗೆ ತುಪ್ಪ ಒಳ್ಳೆಯದು. ಅದರಂತೆ ಬಾಯಿಗೆ ವೀಳ್ಯವೂ ಒಳ್ಳೆಯದು.

ಸರ್ವಜ್ಞನ ವಚನಗಳು 145-147

145. ಕಣ್ಣು ನಾಲಿಗೆ ಮನವು | ತನ್ನದೆಂದನಬೇಡ |
ಅನ್ಯರನು ಕೊಂದರೆನಬೇಡ, ಇವು ಮೂರು |
ತನ್ನ ಕೊಲ್ಲುವವು ಸರ್ವಜ್ಞ ||

ಅರ್ಥ: ಕಣ್ಣು, ನಾಲಿಗೆ ಹಾಗೂ ಮನಸ್ಸು (ಇವು ಮೂರನ್ನೂ) ನಿನ್ನದೆಂದೆಂದುಕೊಳ್ಳಬೇಡ. ಇವು ಮೂರು ವಸ್ತುಗಳು ನಿನ್ನನ್ನೇ ಕೊಲ್ಲುತ್ತವೆ. (ಆಗ ಮಾತ್ರ ನೀನು) "ನನ್ನನ್ನು ಅನ್ಯರು ಕೊಂದರು" ಎಂದು ನುಡಿಯಬೇಡ.

146. ವದನೆ ಯೋಗಿಗೆ ಹೊಲ್ಲ | ಬದನೆ ರೋಗಿಗೆ ಹೊಲ್ಲ |
ಕದನವದು ಹೊಲ್ಲ ನೆರೆಯಲಿ, ನಿದ್ದೆಗೆ |
ತುದಿಗಟ್ಟೆ ಹೊಲ್ಲ ಸರ್ವಜ್ಞ ||

ಅರ್ಥ: ಯೋಗಿಗೆ ಸುಂದರ ಸ್ತ್ರೀಯು ಬೇಡ. ರೋಗಿಗೆ ಬದನೆಕಾಯಿಯು ಹೊಲ್ಲ. ನೆರೆಹೊರೆಯಲ್ಲಿ ಜಗಳವು ಒಳ್ಳೆಯದಲ್ಲ. ಅದರಂತೆ ನಿದ್ರೆ ಮಾಡಲು ತುದಿಗಟ್ಟೆಯು ಒಳ್ಳೆಯದಲ್ಲ (ಏಕೆಂದರೆ ಕೆಳಗೆ ಬೀಳುವ ಭಯವಿರುತ್ತದೆ).

147. ಸಿಂದಿಯನು ಸೇವಿಪನು | ಹಂದಿಯಂತಿರುತಿಹನು |
ಹಂದಿಯೊಂದೆಡೆಗೆ ಉಪಕಾರಿ, ಕುಡುಕನು |
ಎಂದಿಗೂ ಬೇಡ ಸರ್ವಜ್ಞ ||

ಅರ್ಥ: ಸಿಂದಿ (ಹೆಂಡ) ವನ್ನು ಕುಡಿಯುವಂಥವನು ಹಂದಿಯಂತೆ ಇರುತ್ತಾನೆ. ಹಂದಿ ಒಂದು ಸಲ ಉಪಕಾರವಾದರೂ ಮಾಡಿತು. ಆದರೆ ಕುಡುಕನು ಮಾತ್ರ ಎಂದೆಂದಿಗೂ ಬೇಡ (ಅವನಿಂದ ಏನೂ ಆಗಲಾರದು).

ಬುಧವಾರ, ಸೆಪ್ಟೆಂಬರ್ 23, 2015

ಸರ್ವಜ್ಞನ ವಚನಗಳು 142-144

142. ಹೆಣ್ಣನ್ನು ಹೊನ್ನನ್ನು | ಹಣ್ಣಾದ ಮರಗಳನು |
ಕಣ್ಣಿನಲಿ ಕಂಡು ಮನದಲ್ಲಿ, ಬಯಸದಿಹ |
ಅಣ್ಣಗಳು ಯಾರು ಸರ್ವಜ್ಞ ||

ಅರ್ಥ: (ಚೆಲುವೆಯಾದ) ಹೆಣ್ಣನ್ನು , ಬಂಗಾರವನ್ನು ಹಾಗೂ ಹಣ್ಣುಗಳಿಂದ ತುಂಬಿದ ಮರಗಳನ್ನು ಕಣ್ಣಿನಿಂದ ನೋಡಿ ಅವುಗಳನ್ನು (ಮನದಲ್ಲಿಯಾದರೂ) ಬಯಸದಂಥ ಅಣ್ಣಗಳು ಯಾರಾದರೂ ಇದ್ದಾರೆಯೇ? (ಇಲ್ಲ).

143. ವಚನದೊಳಗೆಲ್ಲರೂ | ಶುಚಿ, ವೀರ, ಸಾಧುಗಳು |
ಕುಚ, ವಸ್ತ್ರ ,ಹೇಮ, ಸೋಂಕಿದರೆ ಲೋಕದೊಳು |
ಗಚಲದವರಾರು ಸರ್ವಜ್ಞ ||

ಅರ್ಥ: ನಾನು ಶುಚಿ, ನಾನು ವೀರ, ನಾನು ಸಾಧು ಎಂದು ಮಾತಿನೊಳಗೆ ಹೇಳಿಕೊಳ್ಳಬೇಕಷ್ಟೆ. (ಅಂದರೆ) ಕುಚ, ಶಸ್ತ್ರ ಹಾಗೂ ಬಂಗಾರ ಇವು ಮೂರು ವಸ್ತುಗಳು ಸೋಂಕಿದರೂ ಕೂಡ ಚಂಚಲನಾಗದಂಥಳನು ಯಾವನಾದರು ಇದ್ದಾನಯೇ?

144. ತರಿಸುವದು ಮಿತ್ರರನು | ಮರೆಸುವದು ಬಳಗವನು |
ಇರಿಸುವದು ತನ್ನ ಇದಿರೆನು, ಹೊನ್ನಿನ |
ತರವ ಬೇಡೆಂದ ಸರ್ವಜ್ಞ ||

ಅರ್ಥ: ಐಶ್ವರ್ಯವು  ಮಿತ್ರರನ್ನು ತರಿಸುವುದು. ಬಂಧು-ಬಳಗದವರನ್ನು ಮರೆಯಿಸುವುದು. (ಹಾಗೂ ಅವರನ್ನು) ಅದರಲ್ಲಿಯೇ ತನ್ಮಯನನ್ನಾಗಿಸಿ ಮಾಡುವುದು. ಇಂಥ ಸಿರಿಯ ಸಂಗವೇ ಬೇಡ.

ಸರ್ವಜ್ಞನ ವಚನಗಳು 139-141

139. ಉಳ್ಳವನು ನುಡಿದಿಹರೆ | ಬೆನ್ನ ಹಿಂದಕ್ಕೆ ಇರಿಸಿ |
ಇಲ್ಲದ ಬಡವ ನುಡಿದರೆ, ತುತ್ತಿನಲಿ |
ಕಲ್ಲು ಕಡಿದಂತೆ ಸರ್ವಜ್ಞ ||

ಅರ್ಥ: (ಹಣ) ಉಳ್ಳವನು ಏನನ್ನು ನುಡಿದರೂ (ಅದು) ಒಳ್ಳೆಯದೆಂದು ಅನ್ನುವರು. ಆದರೆ ಬಡವನು ನಿಜವನ್ನು ನುಡಿದರೂ ಕೂಡ (ಅವನ ಮಾತು) ತುತ್ತಿನೊಳಗೆ ಹಳ್ಳು ಕಡಿದಂತೆ ಅಸಹ್ಯವಾಗುವುದು.

140. ತಪ್ಪು ಮಾಡಿದ ಮನುಜ | ಗೊಪ್ಪುವದೆ ಸಂಕೋಲೆ |
ತಪ್ಪು ಮಾಡಿದಗೆ ಸೆರೆಯು, ಸಂಕೋಲೆಗಳು |
ಇಪ್ಪುದೇ ಸರಿಯು ಸರ್ವಜ್ಞ ||

ಅರ್ಥ: ತಪ್ಪು ಮಾಡುವಂಥ ಮನುಷ್ಯನಿಗೆ ಸಂಕೋಲೆ (ಕೈಕೋಳ) ಒಪ್ಪುವುದಿಲ್ಲ. (ಆದರೆ) ತಪ್ಪು ಮಾಡಿದಂಥ ಮನುಷ್ಯನಿಗಾಗಿ (ಮಾತ್ರ) ಸಂಕೋಲೆ ಹಾಗೂ ಸೆರೆಮನೆಗಳು ಇರುವುದು ಒಳ್ಳೆಯದು.

141. ತಪ್ಪು ಮಾಡಿದವಂಗೆ | ತಪ್ಪುದದು ಸಂಕೋಲೆ |
ತಪ್ಪಿಲ್ಲದಿಪ್ಪ ಶರಣಂಗೆ, ಸಂಕೋಲೆ |
ಬಪ್ಪುವದೇಕೆ ಸರ್ವಜ್ಞ ||

ಅರ್ಥ: ತಪ್ಪು ಮಾಡಿದಂಥವನಿಗೆ ಸಂಕೋಲೆಯು ಎಂದಿಗೂ ತಪ್ಪಲಾರದು. (ಆದರೆ ಅದೇ) ತಪ್ಪು ಮಾಡದಂಥ ಶರಣರಿಗೆ ಸಂಕೋಲೆಗಳೇಕೆ ಬರುತ್ತವೆ (ಬರುವುದಿಲ್ಲವೆಂದರ್ಥ).

ಮಂಗಳವಾರ, ಸೆಪ್ಟೆಂಬರ್ 22, 2015

ಸರ್ವಜ್ಞನ ವಚನಗಳು 136-138

136. ಮುನಿವರನ ನೆನೆಯುತಿರು | ವಿನಯದಲಿ ನಡೆಯುತಿರು |
ವನಿತೆಯರ ಬಲೆಗೆ ಸಿಲುಕದಿರು, ಸಿರಿಸುಖವು |
ಮನದಣಿಯಲಿಕ್ಕು ಸರ್ವಜ್ಞ ||

ಅರ್ಥ: ಮುನಿಗಳನ್ನು ನೆನೆಯುತ್ತಿರು. ಯಾವಾಗಲೂ ವಿನಯದಿಂದ ನಡೆಯುತ್ತಿರು ಹಾಗೂ ವನಿತೆಯರ ಬಲೆಗೆ ಸಿಲುಕದೆ ದೂರ ಇರು. ಅಂದರೆ ನಿನಗೆ ಸ್ವರ್ಗ ಸುಖವು ಮನದಣಿಯೇ ದೊರೆಯುವುದು.

137. ಕಂಡುದನು ಅಡೆ ಭೂ | ಮಂಡಲವು  ಮುನಿಯುವುದು |
ಕೊಂಡಾಡುತಿಚ್ಛೆ ನುಡಿದಿಹರೆ, ಜಗವೆಲ್ಲ |
ಮುಂಡಾಡುತಿಹುದು ಸರ್ವಜ್ಞ ||

ಅರ್ಥ: ಕಂಡದ್ದನ್ನು ಕಂಡಂತೆ ಆಡಿದರೆ (ಇಡಿಯ) ಭೂಮಂಡಲವೇ ಸಿಟ್ಟಾಗುವುದು. ಆದರೆ ಅವರನ್ನು ಕೊಂಡಾಡುತ್ತ ಹೊಗಳಿದರೆ ಮಾತ್ರ ಜಗತ್ತೇ (ನಿಮ್ಮನ್ನು) ಮುದ್ದಾಡುವುದು.

138. ತನ್ನ ದೋಷವ ನೂರ | ಬೆನ್ನ ಹಿಂದಕೆ ಇರಿಸಿ |
ಅನ್ಯನೊಂದಕ್ಕೆ ಹುಲಿಯಪ್ಪ, ಮಾನವನು |
ಕುನ್ನಿಯಲ್ಲೇನು ಸರ್ವಜ್ಞ||

ಅರ್ಥ: ತಾನು ಮಾಡಿದ ನೂರಾರು ದೋಷಗಳನ್ನು ಬೆನ್ನ ಹಿಂದೆ ಇರಿಸಿಕೊಂಡು, ಅನ್ಯರು ಮಾಡಿದ ಒಂದೇ ಒಂದು ತಪ್ಪಿಗೂ ಕೂಡ ಹುಲಿಯಂತೆ ಗರ್ಜಿಸುವವನು ನಾಯಿಯಲ್ಲದೆ ಮತ್ತೇನು?

ಸರ್ವಜ್ಞನ ವಚನಗಳು 133-135

133. ಜಾತಿ ಜಾತಿಗೆ ವೈರ | ನೀರಿ ಮೂರ್ಖಗೆ ವೈರ |
ಪಾತಕವು ವೈರ ಸುಜನರ್ಗೆ, ಅರಿದಂಗೆ |
ಏತರದು ವೈರ ಸರ್ವಜ್ಞ |

ಅರ್ಥ: ಜಾತಿ-ಜಾತಿಗಳಲ್ಲಿ ವೈರವು ಸ್ವಾಭಾವಿಕ. ಮೂರ್ಖನಿಗೆ ನೀತಿಯನ್ನು ಕಂಡರೆ ವೈರ ಹಾಗೂ ಸುಜನರಾದವರು ಪಾತಕವನ್ನು ವಿರೋಧಿಸುತ್ತಾರೆ. ಆದರೆ (ಎಲ್ಲವನ್ನೂ) ಅರಿತಂಥವನಿಗೆ ಯಾರ ವೈರತ್ವವೂ ಇರುವುದಿಲ್ಲ.

134. ಧನಕನಕವುಳ್ಳನಕ | ದಿನಕರನವೋಲಕ್ಕು |
ಧನಕನಕ ಹೋದ ಮರುದಿನವೇ, ಹಾಳೂರ |
ಶುನಕನಂತಕ್ಕು ಸರ್ವಜ್ಞ ||

ಅರ್ಥ: ತನ್ನ ಬಳಿ ಐಶ್ವರ್ಯವಿರುವವರೆಗೆ ಅವನು ಸೂರ್ಯನಂತೆ ಪ್ರಕಾಶಿಸುತ್ತಾನೆ. ಆದರೆ ಹೋದ ಮರುದಿನವೇ ಅವನು ಹಾಳೂರಿನ ನಾಯಿಯಂತಾಗುತ್ತಾನೆ.

135. ಮಡದಿ ಮಕ್ಕಳ ಮಮತೆ | ಒಡಲೊಡವೆಯಿರುತನಕ |
ಒಡಲೊಡವೆ ಕೆಟ್ಟ ಮರುದಿನವೆ, ಅವರೆಲ್ಲ |
ಕಡೆಗೆ ಸಾಗುವರು ಸರ್ವಜ್ಞ ||

ಅರ್ಥ: ಮಡದಿ-ಮಕ್ಕಳ ಪ್ರೀತಿಯು (ನಿನ್ನಲ್ಲಿ) ಒಡವೆಗಳಿರುವತನಕ ಮಾತ್ರ (ಆದರೆ ನಿನ್ನಲ್ಲಿಯ) ಒಡವೆಗಳು ನಾಶವಾದ ಮರುದಿನವೇ (ನಿನ್ನಿಂದ) ಅವರೆಲ್ಲರೂ ದೂರಾಗುವರು.

ಸೋಮವಾರ, ಸೆಪ್ಟೆಂಬರ್ 21, 2015

ಸರ್ವಜ್ಞನ ವಚನಗಳು 130-132

130. ಮಾಡಿದುದ ಒಪ್ಪದನ | ಮೂಢನಾಗಿಪ್ಪವನ |
ಕೂಡಿತ ತಾ ಮಾಡಿ, ಇದಿರಾಡಿಕೊಳ್ಳುವನ |
ನೋಡಿದರೆ ತೊಲಗು ಸರ್ವಜ್ಞ ||

ಅರ್ಥ: (ತಾನು) ಮಾಡಿದ ತಪ್ಪನ್ನು ಒಪ್ಪದೆ ಇರುವಂಥವನ, ಮೂರ್ಖನಾಗಿರುವಂಥವನನ್ನು ಕಂಡರೆ (ಕೂಡಲೇ) ಅಲ್ಲಿಂದ ತೊಲಗಿಬಿಡು.

131. ಒಡಹುಟ್ಟಿದವ ಭಾಗ | ದೊಡವೆಯನು ಕೇಳಿದರೆ |
ಕೊಡದೆ ಕದನದಲಿ ಮಡಿದಿಹರೆ, ಅದನು ತ|
ನ್ನೊಡನೆ ಹೂಳುವರೆ ಸರ್ವಜ್ಞ ||

ಅರ್ಥ: ಒಡಹುಟ್ಟಿದ ಸೋದರನ (ತನ್ನ) ಪಾಲಿನ ಒಡವೆಗಳನ್ನು ಕೇಳಿದರೆ ಅವನಿಗೆ ಕೊಡದೆ ಹೊಡೆದಾಡಿ ಕದನದಲ್ಲಿಯೇ ಮಡಿದರೆ ಆ ಒಡವೆಗಳು ಅವನೊಂದಿಗೆ ಹೂಳುವರೇ. (ಎಂದಿಗೂ ಇಲ್ಲ)

132. ಅಂಧಕನು ನಿಂದಿರಲು | ಮುಂದೆ ಬಪ್ಪರ ಕಾಣ |
ಬಂದರೆ ಬಾಯೆಂದನದಿರ್ಪ, ಗರುವಿಯ |
ದಂದುಗವೇ ಬೇಡ ಸರ್ವಜ್ಞ ||

ಅರ್ಥ: ಕುರುಡನೊಬ್ಬನು ನಿಂತುಕೊಂಡಿರಲು ಅವನಿಗೆ ಮುಂದೆ ಬರುವಂಥವರ ಕಾಣಲಾರರು. ಆದರೆ ಬರುವಂಥವರನ್ನು ಕಂಡು ಬಂದರೂ ಬಾ ಎಂದು ಅನ್ನಲಾರದ ಗರ್ವಿಯ ಸಂಗವೇ ಬೇಡ.
  

ಸರ್ವಜ್ಞನ ವಚನಗಳು 127-129

127. ಮಾಳಿಗೆಯ ಮನೆ ಲೇಸು | ಗೂಳಿಯ ಪಶು ಲೇಸು |
ಈಳಿಯ ಹಿತ್ತಲಿರಲೇಸು, ಪತಿವ್ರತೆಯ |
ಬಾಳುಲೇಸೆಂದ ಸರ್ವಜ್ಞ ||

ಅರ್ಥ: ಮಾಳಿಗೆಯ ಮನೆಯು ಒಳ್ಳೆಯದು. ಗೂಳಿಯದು ಪಶುವು ಒಳ್ಳೆಯದು ಹಾಗೂ ಹಿತ್ತಲಲ್ಲಿ ನಿಂಬಿಮೆಯ ಗಿಡವಿದ್ದರೆ ಒಳ್ಳೆಯದು. ಅದರಂತೆ ಪತಿವ್ರತೆಯಾದವಳ ಬಾಳುವಯೇ ಒಳ್ಳೆಯದಾಗಿರುತ್ತದೆ.

128. ಅನ್ಯ ಪುರುಷನ ಕಂಡು | ತನ್ನ ಪಡೆದವನೆಂದು |
ಮನ್ನಿಸಿ ನಡೆವ ಸತಿಯಳಿಗೆ, ಸ್ವರ್ಗದೊಳು |
ಹೊನ್ನಿನ ಮನೆಯು ಸರ್ವಜ್ಞ ||

ಅರ್ಥ: ಅನ್ಯ ಪುರುಷನನ್ನು ತಂದೆಯ ಸಮಾನವೆಂದು ತಿಳಿದು ಅದರಂತೆ ನಡೆಯುವಂಥ ಸಾಧ್ವಿಮಣಿಗೆ ಸ್ವರ್ಗದೊಳಗಿನ ಬಂಗಾರದ ಮಹಲು ಕಾಯ್ದಿರಿಸಲಾಗಿರುತ್ತದೆ.

129. ತಂದೆ ತಾಯಿಗಳು ಘನ | ದಿಂದ  ವಂದಿಸುವಂಗೆ |
ಬಂದ ಕುತ್ತುಗಳು ಬಯಲಾಗಿ, ಸ್ವರ್ಗವದು ಮುಂದೆ ಬಂದಕ್ಕು ಸರ್ವಜ್ಞ ||

ಅರ್ಥ: ತಂದೆ-ತಾಯಿಗಳಲ್ಲಿ ವಿನಯದಿಂದ ಬಂದಂಥ ಕುತ್ತು (ಗಂಡಾಂತರ) ಗಳೆಲ್ಲವೂ ಬಯಲಾಗಿ ಸ್ವರ್ಗವು ಎದುರಿಗೇ ಬರುವುದರಲ್ಲಿ ಸಂದೇಹವಿಲ್ಲ.

ಭಾನುವಾರ, ಸೆಪ್ಟೆಂಬರ್ 20, 2015

ಸರ್ವಜ್ಞನ ವಚನಗಳು 124-126

124. ಕೊಟ್ಟು ಮರುಗಲು ಬೇಡ | ಬಿಟ್ಟು ಹಿಡಿಯಲುಬೇಡ |
ಕೆಟ್ಟ ನಡೆಯವಳ ನೆರೆ ಬೇಡ, ಪರಸತಿಯ |
ಮುಟ್ಟ ಬೇಡೆಂದ ಸರ್ವಜ್ಞ ||

ಅರ್ಥ: (ಇತರರಿಗೆ) ಕೊಟ್ಟಿದ್ದಕ್ಕಾಗಿಯೇ ಮರುಗಬೇಡ ಹಾಗೂ ಕೆಟ್ಟ ನಡೆಯುಳ್ಳಂಥ ಹೆಂಗಸಿನ ನೆರೆಹೊರೆಯರಲ್ಲಿರಬೇಡ. (ಅದರಂತೆ) ಎರಡನೆಯವರ ಮನೆಯ ಸ್ತ್ರೀಯನ್ನು ಮುಟ್ಟಬೇಡ.

125. ಹಣವಳಿದು ಹೋದರೂ | ಹೆಣಬೀಳ ಹೊಡೆದರೂ |
ಮೊಣಕಾಲಗಣಿಕೆ ಮುರಿದರೂ, ಹಾದರದ |
ಕುಣಿಕೆ ಬೇಡೆಂದ ಸರ್ವಜ್ಞ ||

ಅರ್ಥ: (ತನ್ನಲ್ಲಿಯ) ಹಣವು ಹಾಳಾಗಿ ಹೋದರೂ; ಸಾಯುವಂತೆ ಹೊಡೆದರೂ; ಮೊಣಕಾಲುಗಣಿಕೆಗಳನ್ನು ಮುರಿದರೂ ಕೂಡ ವ್ಯಭಿಚಾರ (ಹಾದರ) ಮಾಡಬೇಡ.

126. ಅನ್ಯ ಸತಿಯನು ಕಂಡು | ತನ್ನ ಹೆತ್ತವಳೆಂದು |
ಮನ್ನಿಸಿ ನಡೆವ ಪುರುಷಂಗೆ, ಇಹಪರದಿ |
ಮುನ್ನ ಭಯವಿಲ್ಲ ಸರ್ವಜ್ಞ ||

ಅರ್ಥ: ಪರಸ್ತ್ರೀಯೊಡನೆ ನ್ನ ಹೆತ್ತ ತಾಯೋಪಾದಿಯಲ್ಲಿ ನಡೆದುಕೊಳ್ಳುವ ಪುರುಷನಿಗೆ ಇಹದಲ್ಲೂ ಪರದಲ್ಲೂ ಯಾರ ಭಯವೂ ಇಲ್ಲ. ಅದಕ್ಕಾಗಿ ಹಾಗೆ ನಡೆದುಕೊಳ್ಳುವುದು ಒಳ್ಳೆಯದು.

ಸರ್ವಜ್ಞನ ವಚನಗಳು 121-123

121. ಒಳ್ಳೆಯನು ಇರದೂರ | ಕಳ್ಳನೊಡನಾಟವೂ |
ಸುಳ್ವನ ಮಾತು ಇವು ಮೂರು, ಕೆಸರೊಳಗೆ |
ಮುಳ್ಳು ತುಳಿದಂತೆ ಸರ್ವಜ್ಞ ||

ಅರ್ಥ: ಒಳ್ಳೆಯವನು ಇರದಂಥ ಊರು, ಕಳ್ಳನೊಡನೆ ಸಲಿಗೆ ಹಾಗೂ ಸುಳ್ಳನ ಮಾತುಗಳು ಇವು ಮೂರು ಕೆಸರೊಳಗೆ ಮುಳ್ಳು ತುಳಿದಂತೆಯೇ ಸರಿ.

122. ಅಂದು ಕಾಮನ ಹರನು | ಕೊಂದನೆಂಬುದು ಪುಸಿಯು |
ಇಂದುವದನೆಯರ ಕಡೆಗಣ್ಣು , ನೋಟದಿ |
ನಿಂದಿಹು ಸ್ಮರನು ಸರ್ವಜ್ಞ ||

ಅರ್ಥ: ಅಂದು ಶಿವನು ಆಮನನ್ನು ಕೊಂದನೆಂಬುದು ಸುಳ್ಳು (ಏಕೆಂದರೆ) ಈಗಲೂ ಚಂದ್ರಮುಖಿಯರ ಕಡೆಗಣ್ಣ ನೋಟದಲ್ಲಿ ಕಾಮನು ನಿಂತುಕೊಂಡೇ ಇರುತ್ತಾನೆಂಬುದು ಯಾರಿಗೆ ಗೊತ್ತಿಲ್ಲ?

123. ಬೇಡ ಕಾಯದೆ ಕೆಟ್ಟ | ಜೇಡ ನೇಯದೆ ಕೆಟ್ಟ |
ನೋಡದಲೆ ಕೆಟ್ಟ ಕೃಷಿಕನು, ಸತಿಯ ಬಿ |
ಟ್ಟಾಡಿದವ ಕೆಟ್ಟ ಸರ್ವಜ್ಞ ||

ಅರ್ಥ: ಬೇಡನು (ಬಲೆಯನ್ನು) ಕಾಯದೇ ಕೆಟ್ಟನು. ಜೇಡರವನು (ನೇಕಾರನು) ನೇಯದೇ ಕೆಟ್ಟನು. ಒಕ್ಕಲಿಗನುತನ್ನ ಹೊಲದ ಬೆಳೆಯನ್ನು ನೋಡದೇ ಕೆಟ್ಟನು. ಅದರಂತೆ ಸತಿಯನ್ನು ಬಿಟ್ಟು ಅಡ್ಡಾಡಿದವನೂ ಕೆಟ್ಟನು.