34. ಕೊಟ್ಟು ಕುದಿಯಲು ಬೇಡ | ಕೊಟ್ಟಾಡಿ ಕೊಳಬೇಡ |
ಕೊಟ್ಟು ನಾ ಕೆಟ್ಟೆನೆನಬೇಡ, ಶಿವನಲ್ಲಿ |
ಕಟ್ಟಿಹುದು ಬುತ್ತಿ ಸರ್ವಜ್ಞ ||
ಅರ್ಥ: ಈ ವಚನವು ಸಹ ಸರ್ವಜ್ಞರ 33ನೆಯ ವಚನದ ಅರ್ಥವನ್ನೇ ಸೂಚಿಸುತ್ತದೆ.
35. ಆಗೆ ಬಾ! ಈಗ ಬಾ! ಹೋಗಿ ಬಾ! ಎನ್ನದಲೆ |
ಆಗಲೇ ಕರೆದು ಕೊಡುವವನ, ಧರ್ಮ ಹೊ|
ನ್ನಾಗದೆ ಬಿದ್ದು ಸರ್ವಜ್ಞ ||
ಅರ್ಥ: ದಾನ ಮಾಡುವಂಥವನು ಈಗ ಬಾ , ಇನ್ನು ಸ್ವಲ್ಪ ತಡೆದು ಬಾ , ನಾಳೆಗೆ ಬಾ ,ಎಂದು ನುಡಿಯದೆ , ಕೇಳಲು ಬಂದಾಗ ಕೊಟ್ಟು ಬಿಡುವಂಥವನ ಧರ್ಮವೇ ಒಳ್ಳೆಯದು.ಅದು ಬಂಗಾರದ ಗಟ್ಟಿಯಂತೆ.
36. ತಿರಿದು ತಂದಾದರೂ | ಕರೆದು ಜಂಗಮಕ್ಕಿಕ್ಕು |
ಪರಿಣಾಮವಕ್ಕು ಪದವಕ್ಕು, ಕೈಲಾಸ |
ನೆರೆಮನೆಯಕ್ಕು ಸರ್ವಜ್ಞ ||
ಅರ್ಥ: ತಾನು ತಿರಿದು ತಂದಿದ್ದರೂ ಪರವಾಗಿಲ್ಲ ; ಜಂಗಮರಿಗೆ ಕರೆತಂದು ಉಣಬಡಿಸುವದರಿಂದ ಅವನಿಗೆ ಕೈಲಾಸವೆಂದರೆ ನೆರಮನೆ (ಪಕ್ಕದಮನೆ)ಯಷ್ಟು ಸಮೀಪವಾಗುವುದು.